
ಶಿವಮೊಗ್ಗ,ಏ.25:
ಆಡು ಆಟ ಆಡು,
ಮಕ್ಕಳೆ ರಜೆಯಲ್ಲಿನ ಆಟದ ಹಬ್ಬದಲ್ಲಿ ಎಚ್ಚರಿಕೆಯಿಂದ ಆಡ ಆಡಿ
ತಾಲೂಕಿನ ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು ಒಂಬತ್ತು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.

ಶಿವಮೊಗ್ಗದ ವಿದ್ಯಾನಗರದ ನಿವಾಸಿಯಾಗಿರುವ 9 ವರ್ಷದ ಪ್ರಣಮ್ಯ ಮೃತ ದುರ್ದೈವಿ. ಈ ಘಟನೆಯು ಮೂರು ದಿನಗಳ ಹಿಂದೆ ನಡೆದಿದ್ದು, ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.
ಬೇಸಿಗೆಯ ರಜೆ ಕಳೆಯುವ ಉದ್ದೇಶದಿಂದ ಪ್ರಣಮ್ಯ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಈ ವೇಳೆ ಮನೆಯ ಒಳಗಡೆ ಕೋಣೆಯ ಬಾಗಿಲನ್ನು ಹಾಕಿಕೊಂಡು, ಪಂಚೆಯನ್ನು ಬಳಸಿ ಜೋಕಾಲಿಯನ್ನು ಕಟ್ಟಿಕೊಂಡು ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಂಚೆಯು ಕುತ್ತಿಗೆಗೆ ಬಿಗಿದುಕೊಂಡು ಈ ಅವಘಡ ಸಂಭವಿಸಿದೆ.

ಚಿಕ್ಕಮ್ಮನ ಮನೆಯಲ್ಲಿ ರಜೆಯ ದಿನಗಳನ್ನು ಕಳೆಯಬೇಕಿದ್ದ ಬಾಲಕಿಯು ಆಟವಾಡುತ್ತಿದ್ದಾಗಲೇ ಸಾವನ್ನಪ್ಪಿರುವುದು ಕುಟುಂಬದಲ್ಲಿ ಶೋಕವನ್ನುಂಟುಮಾಡಿದೆ. ಇನ್ನೂ ಘಟನೆ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
