ಸಾಗರ : ಇಲ್ಲಿನ ಎಸ್.ಎನ್.ನಗರದಲ್ಲಿ ಮನೆ ಎದುರು ಆಟವಾಡುತ್ತಿದ್ದ ಎರಡೂವರೆ ವರ್ಷದ ಭವಿನ್ ಎಂಬ ಬಾಲಕ ಹಾವು ಕಚ್ಚಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.

ಎಸ್.ಎನ್.ನಗರದ ಅಕ್ಷತಾ ಮತ್ತು ಗಣೇಶ್ ಅವರ ಮಗ ಭುವಿನ್ ಮನೆ ಎದುರಿನ ನಲ್ಲಿಕಟ್ಟೆ ಬಳಿ ಆಟವಾಡುತ್ತಿದ್ದಾಗ ಮಗುವಿನ ಸಮೀಪ ಹಾವೊಂದು ಬಂದಿತ್ತು. ಮಗು ಹಾವು ಹಿಡಿಯಲು ಮುಂದಾದಾಗ ಕೈಗೆ ಕಚ್ಚಿದ ಘಟನೆ ನಡೆದಿದೆ.

ಮಗು ಕೂಗಿದ ತಕ್ಷಣ ಪೋಷಕರು ಹೊರಗೆ ಬಂದು ನೋಡಿದಾಗ ಹಾವು ಹರಿದು ಹೋಗುತಿತ್ತು. ತಕ್ಷಣ ಮಗುವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಹೊತ್ತಿಗೆ ಮಗು ಮೃತಪಟ್ಟಿದೆ. ಹದಿನೈದು ದಿನಗಳ ಹಿಂದೆ ಮಗನಿಗೆ ಹುಷಾರಿಲ್ಲ ಎಂದು ಅಕ್ಷತಾ ತಾಯಿ ಮನೆಗೆ ಬಂದಿದ್ದರು.