ಸಾಗರ : ಮಾರಿಕಾಂಬಾ ಜಾತ್ರೆಯನ್ನು ಎಲ್ಲರೂ ಸೇರಿ ಅರ್ಥಪೂರ್ಣವಾಗಿ ಆಚರಿಸೋಣ. ಜಾತ್ರೆ ಅತ್ಯಂತ ವಿಜೃಂಭಣೆಯಿಂದ ನಡೆಸಲು ಅಗತ್ಯ ಸಿದ್ದತೆ ನಡೆಸಲಾಗುತ್ತಿದೆ ಎಂದು ಶಾಸಕ ಹಾಗೂ ಅರಣ್ಯ ಕೈಗಾರಿಕಾ ನಿಗಮದ ಅಧ್ಯಕ್ಷ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

ಇಲ್ಲಿನ ಮಾರಿಕಾಂಬಾ ದೇವಸ್ಥಾನದಲ್ಲಿ ಸೋಮವಾರ ಫೆಬ್ರವರಿ ೩ರಿಂದ ನಡೆಯಲಿರುವ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಸಿದ ಅವರು, ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಗೋಪುರಕ್ಕೆ ಬಣ್ಣ ಬಳಿಯುವುದು, ಮಂಟಪ, ಶಾಮಿಯಾನ, ಲೈಟಿಂಗ್ ಇನ್ನಿತರೆ ಟೆಂಡರ್ಗಳು ಕಾನೂನುಬದ್ದವಾಗಿ ಕರೆದು ಕೆಲಸ ಪ್ರಾರಂಭಿಸಲು ತಿಳಿಸಲಾಗಿದೆ ಎಂದು ಹೇಳಿದರು.

ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ೨ ಕೋಟಿ ರೂ. ಅನುದಾನ ಮಂಜೂರು ಮಾಡಿದ್ದು ತುರ್ತು ಕಾಮಗಾರಿ ಕೈಗೊಳ್ಳಲಾಗುತ್ತಿದೆ. ನಗರದ ಬಿ.ಎಚ್.ರಸ್ತೆ ಡಾಂಬಾರೀಕರಣ ಕಾಮಗಾರಿ ತ್ವರಿತವಾಗಿ ನಡೆಯುತ್ತಿದೆ. ಇದರ ಜೊತೆಗೆ ಕೆಳದಿ ರಸ್ತೆ, ಹೊಸನಗರ ರಸ್ತೆ ಸಹ ಅಭಿವೃದ್ದಿಪಡಿಸಿ ಡಿವೈಡರ್ಗಳನ್ನು ಅಳವಡಿಸಿ ವಿದ್ಯುದ್ದೀಪ ಅಳವಡಿಸಲಾಗುತ್ತಿದೆ. ಒಟ್ಟು ಸಾಗರ ನಗರ ಸಂಪರ್ಕಿಸು ರಸ್ತೆಗಳಲ್ಲಿ ೪೦೦ ವಿದ್ಯುದ್ದೀಪಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಜಾತ್ರೆ ಯಶಸ್ಸಿಗಾಗಿ ೨೦ ಸಮಿತಿಗಳನ್ನು ಮಾಡಲು ತೀರ್ಮಾನಿಸಿದೆ. ಜಾತ್ರೆಗೆ ಬರುವ ಭಕ್ತಾದಿಗಳಿಗೆ ಯಾವುದೇ ಸಮಸ್ಯೆ ಆಗಬಾರದು. ಅಮ್ಮನವರ ದರ್ಶನಕ್ಕೆ ಭಕ್ತರು ಬಿಸಿಲಿನಲ್ಲಿ ನಿಂತು ಸಮಸ್ಯೆ ಅನುಭವಿಸಬಾರದು ಎಂದು ವಿಶೇಷ ವ್ಯವಸ್ಥೆ ಮಾಡಲು ಸೂಚಿಸಿದೆ. ಸಾಗರ ಜಾತ್ರೆ ಎಲ್ಲರೂ ಸೇರಿ ಆಚರಿಸುವ ಉತ್ಸವವಾಗಿದ್ದು ಅತ್ಯಂತ ಸಂಭ್ರಮದಿಂದ ಎಲ್ಲರೂ ಸೇರಿ ಜಾತ್ರೆ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾರಿಕಾಂಬಾ ದೇವಿ ನ್ಯಾಸ ಟ್ರಸ್ಟ್ ಅಧ್ಯಕ್ಷ ಕೆ.ಎನ್.ನಾಗೇಂದ್ರ, ಪ್ರಧಾನ ಕಾರ್ಯದರ್ಶಿ ಗಿರಿಧರ ರಾವ್, ಖಜಾಂಚಿ ನಾಗೇಂದ್ರ ಕುಮಟಾ, ಪೌರಾಯುಕ್ತ ಎಚ್.ಕೆ.ನಾಗಪ್ಪ ಇನ್ನಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಕಾರ್ಯಕ್ರಮಕ್ಕೆ ನಗರಸಭೆಯಿಂದ ೩ ಲಕ್ಷ ರೂ. ಚೆಕ್ಕನ್ನು ಶಾಸಕರ ಮೂಲಕ ಕಾಲೇಜಿಗೆ ಹಸ್ತಾಂತರಿಸಲಾಯಿತು.