ಶಿವಮೊಗ್ಗ : ಯುವ ಪ್ರತಿಭೆಗಳೇ ನಿರ್ಮಿಸಿ, ನಿರ್ದೇಶಿಸಿರುವ ‘ಹಚೆ’ ಚಿತ್ರ ನಾಳೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಅಶ್ವ ಫಿಲಂಸ್ ಮತ್ತು ಯಶೋದರ ಫಿಲಂಸ್ ಲಾಂಚನದಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಶಿವಮೊಗ್ಗದವರೇ ಆದ ಯಶೋಧರ ನಿರ್ದೇಶನ ಮಾಡಿದ್ದು, ಅವರಿಗೆ ಮಧುಸೂದನ್ ಸಾಥ್ ನೀಡಿದ್ದಾರೆ. ಹೊಸ ಪ್ರತಿಭೆ ಅಭಿಮನ್ಯು ಈ ಚಿತ್ರದ ಮೂಲಕ ನಾಯಕ ನಟನಾಗಿ ಬೆಳ್ಳಿ ತೆರೆಗೆ ಎಂಟ್ರಿ ಯಾಗುತ್ತಿದ್ದು, ಅವರಿಗೆ ಜೋಡಿಯಾಗಿ ನವ ನಟಿ ಆದ್ಯಾ ಕಾಣಿಸಿಕೊಂಡಿದ್ದಾರೆ.


ಸೆಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಚಿತ್ರ ಇದ್ದಾಗಿದ್ದು, ಪ್ರೇಕ್ಷಕರಿಗೆ ಹೊಸ ಬಗೆಯ ಕಥಾ ಲೋಕವನ್ನೇ ತೆರೆದಿಡಲಿದೆ ಎನ್ನುವ ವಿಶ್ವಾಸ ನಿರ್ದೇಶಕ ಮಧುಸೂದನ್ ಅವರದ್ದು. ಸದ್ಯಕ್ಕೆ ಚಿತ್ರದ ಕಥೆಯನ್ನು ಸಸ್ಪೆನ್ಸ್ ಆಗಿಯೇ ಇಟ್ಟಿರುವ ಅವರು ಚಿತ್ರ ಮಂದಿರದಲ್ಲಿ ಚಿತ್ರ ನೋಡಿದ ಪ್ರೇಕ್ಷಕರಿಂದ ದೊಡ್ಡ ಮಟ್ಟದ ಪ್ರಶಂಸೆ ಸಿಗಲಿದೆ ಎನ್ನುವ ನಂಬಿಕೆಯಲ್ಲಿದ್ದಾರೆ. ರಮೇಶ್ ಭಟ್ ಗುರುರಾಜ್ ಹೋಸಕೋಟೆ ಸೇರಿದಂತೆ ಹಿರಿಯ ಕಲಾವಿದರ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಬೆಂಗಳೂರು, ಚಿಕ್ಕಮಗಳೂರು ಸೇರಿದಂತೆ ಹಲವೆಡೆಗಳಲ್ಲಿ ಚಿತ್ರಕ್ಕೆ ಚಿತ್ರೀಕರಣ ನಡೆದಿದೆ. ಬಾದ್ ಷಾ ಹೊನ್ನಾಳಿ ಛಾಯಾಗ್ರಹಣ ಮಾಡಿದ್ದಾರೆ.

ಚಿತ್ರದಲ್ಲಿ ವಿವೇಕ ಚಕ್ರವರ್ತಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಮೂರು ಹಾಡುಗಳಿದ್ದು ಹೃದಯ ಶಿವ ಅವರ ಸಾಹಿತ್ಯವಿದೆ. ಚಂದ್ರು ಬಂಡೆ ನಿರ್ದೇಶನದಲ್ಲಿ ಚಿತ್ರಕ್ಕೆ ಐದು ಫೈಟುಗಳಿದ್ದು, ನೋಡುಗರಿಗೆ ರೋಮಾಂಚನ ತರಿಸಲಿವೆ ಎನ್ನುತ್ತಾರೆ ನಿರ್ದೇಶಕ ಯಶೋಧರ. ಯೆಲ್ಲೋ ರೆಡ್ ಎಂಟರ್ ಟೈನ್ ಮೆಂಟ್ ಮೂಲಕ ರಾಜ್ಯಾದ್ಯಂತ ಬಿಡುಗಡೆ ಆಗುತ್ತಿರುವ ಈ ಚಿತ್ರವೂ ಶಿವಮೊಗ್ಗದಲ್ಲಿ ಭಾರತ್ ಸಿನಿಮಾಸ್ನಲ್ಲಿ ತೆರೆ

ಕಾಣುತ್ತಿದೆ. ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಎಕ್ಸೈಟ್ ಆಗಿರುವ ನಿರ್ದೇಶಕರು, ನಾನು ನಿಮ್ಮೂರ ಹುಡುಗ., ಸಿನಿಮಾ ಮೇಲಿನ ಆಸಕ್ತಿಯಿಂದ ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದೇನೆ. ಶಿವಮೊಗ್ಗ ಜನರ ಆಶೀರ್ವಾದ ನನಗೆ ಬೇಕಿದೆ. ಎಲ್ಲರೂ ಪ್ರೋತ್ಸಾಹ ಸಿಕ್ಕರೆ ಮುಂದೆ ಒಳ್ಳೆಯ ಸಿನಿಮಾ ಮಾಡುವೆ ಎಂದು ಹೇಳುತ್ತಾರೆ.
ಚಿತ್ರದುರ್ಗ ಭೋವಿ ಮಹಾ ಸಂಸ್ಥಾನದ ಜಗದ್ಗುರು ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರು ಚಿತ್ರ ಆಶೀರ್ವಾದ ಮಾಡಿದ್ದು, ಈ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸಲು ಉದ್ಯಮಿ ಹಾಗೂ ಅಬ್ಬಲಗೆರೆ ಗ್ರಾಮ ಪಂಚಾಯಿತಿ ಸದಸ್ಯ ಡಾ. ಜಿ. ಮಂಜುನಾಥ ಸೇರಿದಂತೆ ದೊಡ್ಡ ತಂಡವೇ ಹೆಗಲು ಕೊಟ್ಟಿದೆ. ಹಾಗೆಯೇ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯರಾದ ದೇಶಾದ್ರಿ ಹೊಸ್ಮನೆ, ಶಿವಮೊಗ್ಗ ಧೀರರಾಜ್ ಹೊನ್ನವಿಲೆ ಅವರು ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದ್ದಾರೆ.